ವಿಷಯಕ್ಕೆ ಹೋಗಿ

ಅಮಾಯಕ ನೈಜ ಕಥೆ ( ಸಂಚಿಕೆ-೦೧)

ಆಕೆ ಮರುದೇವಿ ಅಮ್ಮ. ಜೈನರ ಅಳಿಯ ಸಂತಾನದ ಶ್ರೀಮಂತ ಜಮೀನ್ದಾರಿ ಕುಟುಂಬದಲ್ಲಿ ಹುಟ್ಟಿ ಬೆಳೆದವರು. ಇವರದು ಊರಿನ ಪಟೇಲರ ಕುಟುಂಬ. ಈಕೆ ಗಟ್ಟಿಗಿತ್ತಿ, ಸ್ವಾಭಿಮಾನಿ ಹೆಂಗಸು. ಛಲ ಧೈರ್ಯ ಹಠಗಳಿಗೆ ಇನ್ನೊಂದು ಹೆಸರೇ 'ಮರುದೇವಿಯಮ್ಮ' ಎಂಬಂತೆ ಇತ್ತು ಅವರ ವ್ಯಕ್ತಿತ್ವ. 
     ತನ್ನ ಜೀವನದುದ್ದಕ್ಕೂ ಅಂದಿನ ಪುರುಷ ಪ್ರದಾನ ಸಮಾಜದಲ್ಲಿ, ತಾನು ಯಾವುದೇ ಪುರುಷರಿಗೆ ಕಮ್ಮಿ ಇಲ್ಲ ಎಂಬಂತೆ ಜೀವಿಸಿದಾಕೆ.
ಪಟೇಲರ ಕುಟುಂಬದಲ್ಲಿ ಹುಟ್ಟಿದ ಈಕೆ, ಪುರುಷರಿಗೆ ಮೀಸಲಾಗಿದ್ದ ಊರಿನ 'ಪಟೇಲರ' ಹುದ್ದೆಯನ್ನು ಮಹಿಳೆಯರಿಗ್ಯಾಕೆ ಕೊಡಬಾರದು ಎಂದು ಹೋರಾಟ ಮಾಡಿದಾಕೆ. ಮಾತ್ರವಲ್ಲದೆ ಒಂದೊಮ್ಮೆ ಪಟೇಲ ಹುದ್ದೆಗಾಗಿ ಅರ್ಜಿಯನ್ನು ಸಲ್ಲಿಸಿದಾಕೆ.
   ಇವರ ಈ ನಡೆ ಇವರ ಆ ದೊಡ್ಡ ಅವಿಭಕ್ತ ಕುಟುಂಬದ, ಮನೆಯ ಪುರುಷ ಮತ್ತು ಮಹಿಳಾ ಸದಸ್ಯರೆಲ್ಲರಿಗು ಸಹಿಸಲಸಾಧ್ಯವಾಗಿತ್ತು. ಆದರೆ, ಈಕೆಯದು ಅದಾವುದಕ್ಕೂ ಅಂಜುವ ವ್ಯಕ್ತಿತ್ವವಾಗಿರಲಿಲ್ಲ.

      ಇವರ ಒಬ್ಬನೇ ಗಂಡು ಮಗ 'ಶಾಂತಿ' ಯಾನೆ "ಶಾಂತಿರಾಜ" ಈ ಕಥೆಯ ದುರಂತ ಕಥಾನಾಯಕ.

     ಆಗಿನ ಬ್ರಿಟಿಷ್ ಸರಕಾರದ ಅಧಿಕಾರಿಗಳು, ಕಾರ್ಯ ನಿಮಿತ್ತ ಪಟೇಲರ ಮನೆಗೆ ಭೇಟಿ ನೀಡುತ್ತಿದ್ದರು.
  ಒಮ್ಮೆ "ಶಾಂತಿ" ಮಗುವಾಗಿದ್ದ ಸಂದರ್ಭದಲ್ಲಿ, ಒಬ್ಬ ಉನ್ನತ ಮಟ್ಟದ ಬ್ರಿಟೀಷ್ ಅಧಿಕಾರಿ ಇವರ ಮನೆಗೆ ಬಂದಿದ್ದರು. ಮದ್ಯಾಹ್ನದ ಹೊತ್ತು ಊಟ ಉಪಚಾರ ಮುಗಿಸಿ, ಮನೆಯ ಚಾವಡಿಯಲ್ಲಿ ಮರದ ಕುರ್ಚಿಯಲ್ಲಿ ಕುಳಿತು ಮೇಜಿನಲ್ಲಿ ದಾಖಲೆಗಳನ್ನು ಹರಡಿ ಏನನ್ನೋ ಪರಿಶೀಲಿಸುತ್ತಿದ್ದರು. ಆಗ ಮರುದೇವಿಯಮ್ಮನ ಪುಟ್ಟ ಮಗ 'ಶಾಂತಿ' ಮೆಲ್ಲನೆ ಅಂಬೆಗಾಲು ಇಡುತ್ತ, ಕುಳಿತಿದ್ದ ಅಧಿಕಾರಿಯ ಬಳಿಗೆ ಬಂದು ಅವರ ಲೇಖನಿಯನ್ನು ಕಿತ್ತುಕೊಂಡ. ಆಗ ತಾಯಿ ಮರುದೇವಿ ಅವರು ಒಳಗಿನಿಂದ ಬೇಗನೆ ಓಡಿ ಬಂದು ಮಗುವಿನ ಕೈಯಲ್ಲಿದ್ದ ಲೇಖನಿಯನ್ನು ಮೃದುವಾಗಿ ತೆಗೆದು ಮೇಜಿನ ಮೇಲಿಟ್ಟು ಮಗುವನ್ನು ಎತ್ತಿಕೊಂಡರು.
   ಆಗ, ಆ ಅಧಿಕಾರಿಯು ಮುದ್ದಾದ ಗಂಡು ಮಗುವನ್ನು ನೋಡಿ ಸಂತೋಷಗೊಂಡು ಮರುದೇವಿ ಅವರಲ್ಲಿ "ಮಗುವಿನ ಹೆಸರೇನು" ಎಂದು ಕೇಳಿದರು. 
 ಆಗ ಇವರು ಮುಗುಳು ನಗುತ್ತಾ ಹೆಮ್ಮೆಯಿಂದ "ಶಾಂತಿರಾಜ" ಎಂದರು. 
ಅಷ್ಟಕ್ಕೆ ಸುಮ್ಮನಿರದ ಆ ಅಧಿಕಾರಿ. "ನಿಮ್ಮಲ್ಲಿ ಎಲ್ಲರ ಹೆಸರಿನ ಜೊತೆ ಹೆಚ್ಚಾಗಿ "ರಾಜ" ಎಂದು ಯಾಕೆ ಇಡುತ್ತೀರಿ" ಎಂದು ಕೇಳಿದರು.
   ಈ ಮಾತು ಯಾಕೊ ಮರುದೇವಿಯವರಿಗೆ ಇಷ್ಟವಾಗಲಿಲ್ಲ. ಅದಕ್ಕೆ ಮರುದೇವಿಯವರು "ನಮ್ಮದು ರಾಜರ ವಂಶ, ಹಾಗಾಗಿ ನಮ್ಮಲ್ಲಿ ಹುಟ್ಟಿದವರೆಲ್ಲರು ರಾಜ ಎಂದು ಕರೆಯಲ್ಪಡುತ್ತಾರೆ " ಎಂದು ಕಟುವಾಗಿ ನುಡಿದು, ಮಗುವನ್ನು ಎತ್ತಿಕೊಂಡು ಮನೆಯ ಒಳಗೆ ನಡೆದರು. ಈ ಮಾತು ಎಷ್ಟೊಂದು ಕಟುವಾಗಿ ಇತ್ತು ಎಂದರೆ, 
ಸಪ್ತ ಸಾಗರದಾಚೆಯಿಂದ ವ್ಯಾಪಾರಕ್ಕೆ ಎಂದು ಬಂದು ನಂತರ ಕುತಂತ್ರದಿಂದ ನಮ್ಮವರನ್ನು ಅಡಿಯಾಳುಗಳನ್ನಾಗಿ ಮಾಡಿ ಕೊಂಡಿದ್ದ, ಬ್ರಿಟಿಷ್ ಸರಕಾರದ, ಆ ಕೆಂಪು ಮೂತಿಯ ಅಧಿಕಾರಿಗೆ ಮುಖಕ್ಕೆ ಹೊಡೆದಂತೆ ಇತ್ತು. ಇದಕ್ಕಾಗಿ ಮನೆಯ ಹಿರಿಯರು ಇವರನ್ನು ಗದರಿಸಿದ್ದರು.

  'ಮರುದೇವಿ' ಅವರನ್ನು 
ದೊಡ್ಡ ಆಸ್ತಿ ಇರುವ ಅನುಕೂಲಸ್ತರ ಮನೆಗೆ ವಿವಾಹ ಮಾಡಿ ಕೊಟ್ಟಿದ್ದರು. ಅನೇಕ ವರ್ಷ ನೆಮ್ಮದಿಯ ಸಂಸಾರ ಮಾಡಿದ್ದರು ಈಕೆ.
ನಂತರದಲ್ಲಿ ಪತಿ ಯಾವುದೋ ಕಾಯಿಲೆ ಬಂದು ಮೃತರಾಗಿದ್ದರು. 
ಈಕೆ ಒಟ್ಟು 9 ಮಕ್ಕಳನ್ನು ಹೆತ್ತಿದ್ದರು ಖಾಯಿಲೆ ಕಸಾಲೆ ಎಂದು ಉಳಿದದ್ದು 3 ಮಕ್ಕಳು ಮಾತ್ರ.
ಹಿರಿಯವನೊಬ್ಬ ಗಂಡು ಮಗ "ಶಾಂತಿರಾಜ" ಮತ್ತಿಬ್ಬರು ಹೆಣ್ಣು ಮಕ್ಕಳು. 
 ಗಂಡ ಮೃತಾರಾದರೆ ಹೆಂಡತಿ ತವರು ಸೇರುವುದು ಆಗಿನ ಕಾಲದಲ್ಲಿ ವಾಡಿಕೆಯಲ್ಲಿತ್ತು. ಅದರಲ್ಲೂ ಅಳಿಯ ಸಂತಾನ ಕುಟುಂಬದಲ್ಲಿ ಈ ಪದ್ಧತಿ ಸ್ವಲ್ಪ ಹೆಚ್ಚಾಗಿಯೇ ಇತ್ತು.

  ಮರುದೇವಿಯಮ್ಮನವರ ತಂದೆ, ತಾನು ಸತ್ತರೆ ತನ್ನ ಹೆಂಡತಿ ಮಕ್ಕಳು ಅನಾಥರಾಗಬಾರದೆಂದು ಇವರಿಗಾಗಿ ಬಂಟ್ವಾಳ ತಾಲೂಕಿನ ಅಮ್ಟೂರು ಎಂಬಲ್ಲಿ ಮನೆ ಮತ್ತು ಆಸ್ತಿ ಖರೀದಿಸಿ ಕೊಟ್ಟಿದ್ದರು. ತಂದೆಯ ಮರಣಾನಂತರ ತನ್ನ ತಾಯಿ ಮತ್ತು ಸಹೋದರ ಸಹೋದರಿಯರೆಲ್ಲ ಅಮ್ಟೂರಿನಲ್ಲೆ ನೆಲೆಸಿದ್ದರು. ತನ್ನ ಗಂಡನನ್ನು ಅಗಲಿದ ನಂತರ ಇವರೂ ಕೂಡ ತನ್ನ ಮಕ್ಕಳೊಂದಿಗೆ ಇದೇ ಮನೆಯಲ್ಲಿ ನೆಲೆಸಿದ್ದರು.
       ಹೀಗೆ ಕಾಲ ಉರುಳಿ ಹೋಗಿತ್ತು. ಮಗ "ಶಾಂತಿ" ಬೆಳೆದು ನಿಂತಿದ್ದ. ಸಾತ್ವಿಕ ಸ್ವಭಾವದ, ಸಮಾಧಾನ ಚಿತ್ತದ, ಸುಂದರ ಯುವಕನಾಗಿದ್ದ. 
    ಒಮ್ಮೆ ಯಾವುದೋ ಸಣ್ಣ ವಿಷಯಕ್ಕೆ ಮರುದೇವಿ ಅಮ್ಮನಿಗೂ ಮನೆಯ ಇತರ ಹೆಂಗಸರಿಗು ಜಗಳವಾಯಿತು. ಜಗಳ ಜೋರಾಗಿ, ಆ ಹೆಂಗಸರು ಮರುದೇವಿ ಅಮ್ಮನ ವಿರುದ್ದ ಪಟೇಲರಲ್ಲಿ ದೂರಿದರು. ಇದರಿಂದಾಗಿ ಜಗಳವು ಮರುದೇವಿಯಮ್ಮ ಮತ್ತು ಅವರ ತಮ್ಮ ಪಟೇಲರ ಮದ್ಯೆ ಮುಂದುವರಿಯಿತು.
  ಈ ಜಗಳದಲ್ಲಿ ಇತರರು ಉರಿವ ಬೆಂಕಿಗೆ ತುಪ್ಪ ಸುರಿಯುವಂತೆ ಕಿಚ್ಚು ಹಚ್ಚಿದರೆ ಹೊರತು ಇಬ್ಬರನ್ನು ಸಮಾಧಾನ ಪಡಿಸಲಿಲ್ಲ. ಜಗಳ ವಿಪರೀತವಾಗಿ 
ಈ ಜಗಳದಲ್ಲಿ ತಮ್ಮ ನೇಮಿರಾಜರು ಇವರನ್ನು ಬೆತ್ತದಿಂದ ಮೈ ಮೇಲೆ ಬಾಸುಂಡೆ ಬರುವಂತೆ ಚೆನ್ನಾಗಿ ಹೊಡೆದಿದ್ದರು.

  ತನ್ನ ಅಕ್ಕರೆಯ ತಮ್ಮ, ಪಟೇಲ 'ನೇಮಿರಾಜ' ಹೊಡೆದದ್ದರಿಂದ ಈಕೆ ಬಹಳವಾಗಿ ನೊಂದು ಕೊಂಡಿದ್ದರು. ಸುಮಾರು ಎರಡು ಮೂರು ದಿನಗಳ ಕಾಲ ಸರಿಯಾಗಿ ಊಟ ನಿದ್ದೆಯನ್ನು ಮಾಡುತ್ತಿರಲಿಲ್ಲ. ಯಾರೇ ಸಮಾಧಾನ ಪಡಿಸಿದರು, ಸ್ವತಃ ತಮ್ಮನೇ ಕ್ಷಮೆ ಕೇಳಿ ಸಮಾಧಾನ ಮಾಡಿದರು ಆಕೆ ಸಮಾಧಾನಗೊಳ್ಳಲಿಲ್ಲ.  
      ಆ ಸಂದರ್ಭದಲ್ಲಿ ಯುವಕನಾಗಿದ್ದ ಅವರ ಮಗ "ಶಾಂತಿ" ಆ ಘಟನೆ ಸಂದರ್ಭ ಮನೆಯಲ್ಲಿ ಇರಲಿಲ್ಲ. ಯಾರೋ ನೆಂಟರಿಷ್ಟರ ಮನೆಗೆ ಹೋಗಿದ್ದ. ಇದ್ದಿದ್ದರೂ, ತಾನು ಬಹಳವಾಗಿ ಗೌರವಿಸುತಿದ್ದ ಸೋದರಮಾವನನ್ನು ತನ್ನ ತಾಯಿಯ ಪರವಾಗಿ ನಿಂತು ಪ್ರಶ್ನಿಸುವ ಧೈರ್ಯ ಆತನಲ್ಲಿ ಇರಲಿಲ್ಲ.
ಮರುದೇವಿ ಅಮ್ಮ ತನ್ನ ಸ್ವಾಭಿಮಾನಕ್ಕೆ, ಧಕ್ಕೆ ಬಂದಿತೆಂದು ಬಹಳ ಬೇಸರಗೊಂಡು ಒಂದು ಕಟುವಾದ ದೃಢ ನಿರ್ಧಾರಕ್ಕೆ ಬಂದರು.

'ಅದು, ಆ ಮನೆಯನ್ನೇ ಬಿಟ್ಟು ಹೋಗುವ ನಿರ್ಧಾರ.'

ಒಂದು ದಿನ ರಾತ್ರಿ ಬೆಳಗಾಗುದರೊಳಗೆ ಆ ಮನೆಯಿಂದ ತನ್ನ ಎರಡು ಎಳೆಯ ಹೆಣ್ಣು ಮಕ್ಕಳೊಂದಿಗೆ ಹೊರಟು ಹೋಗಿದ್ದರು. ಜೀವಮಾನದಲ್ಲಿ ಮತ್ತೆಂದೂ ಆ ಮನೆಗೆ ಕಾಲಿಡಲಿಲ್ಲ.
ಈ ಒಂದು ಘಟನೆ ಅವರ ಬಾಳಿನ ಒಂದು ಕಹಿ ಘಟನೆ. ಮತ್ತು ಒಂದು ದೊಡ್ಡ ನಿರ್ಧಾರವಾಗಿತ್ತು.
ಈ ಘಟನೆಯಿಂದ ಅವರ ಬಾಳಿನಲ್ಲಿ ಒಂದು ಮಹತ್ತರವಾದ ತಿರುವು ಪಡೆಯಿತು.

(ಮುಂದುವರಿಯುತ್ತದೆ)...

ಕಾಮೆಂಟ್‌ಗಳು

Popular Posts

ಬಾಳು ಮತ್ತು ಗೋಳು

ಸಾತ್ವಿಕ ಜೀವನದ ದಾರಿಯಲಿ ನಡೆಯಲಾರದೆ ಎಡವಿದವನು ಅಲೆಮಾರಿಯೋ...! ಹಣೆಬರಹವನು ಗೀಚಿಬಿಟ್ಟ ಭಗವಂತನು ಏನನ್ನೂ ಅರಿಯದ ಸೋಮಾರಿಯೋ....! ಜನಮ ನೀಡಿ ತಿದ್ದಿ ತೀಡಿ, ಸನ್ಮಾರ್ಗದಲಿ ನಡೆಯಲು ಪ್ರೇರೇಪಿಸಿದವರಿಗೆ ಅಭಾರಿಯೋ.!  ಮೌನವಾಗಿದ್ದು, ಜೀವಚ್ಛವದಂತಿರುವ, ಮುಗ್ದ ಮನಸ್ಸಿನ ಮೇಲೆ ದಬ್ಬಾಳಿಕೆಯ ಸವಾರಿಯೋ...! ಅಂಬೆಗಾಲಲಿ ಕಲಿತು, ದಾಪುಗಾಲಲಿ ನಡೆದು , ಕೋಲೂರಿ ನಡೆವ ತನಕ, ಬಾಳೆಂಬುದು ರಹದಾರಿಯೋ...!                                                        -ಮಿಥುನ್ ಜೈನ್

ಸರಳತೆ ಸೌಹಾರ್ದತೆ - ಮನುಜ ಕುಲಂ ತಾನೊಂದೆ ವಲಂ

ಮನುಜ ಕುಲಂ ತಾನೊಂದೆ ವಲಂ (ಸರಳ ಸೌಹಾರ್ದತೆ)  ಧರ್ಮಗಳೆಲ್ಲವು  ಒಳಿತನು ನೆನೆದರೆ ಜನಗಳ ಮದ್ಯೆ ದ್ವೇಷವೇಕೆ  !  ?  ಕರ್ಮ ಕಾಯಕವ ಮನವ ಬಯಸಿದರೆ ಪರರದು ಎಂಬ ಹಂಗೇಕೆ  ! ?  !ಪ! ಮಂದಿಯ ಮದ್ಯೆ ಮುನಿಸಿರದಿದ್ದರೆ  ಜಾತಿ ಜಾತಿ ನಡು ಬಿರುಕೇಕೆ  !  ?  ಒಂದಾಗಿದ್ದರೆ, ಎಲ್ಲಾ ಪಂಗಡಗಳು. ಏಕಿದೆ ನಡು ನಡು ಗೋಡೆಗಳು   ! ಪ! ಸಾರಿದರಲ್ಲವೇ  ಕವಿ ಕುವೆಂಪು. ವಿಶ್ವ ಮಾನವತೆಯ ಕಂಪು.  !  ಒಂದೇ,,ಜಾತಿ ಮತ, ದೇವರು ಎಂದರು.  ಗುರು ಶ್ರೀ ನಾರಾಯಣರು.   ! ಪ! ಇದ ಅರಿತರೆ ಬದುಕಿನ ಮಾರ್ಗ. ಬಾಳೊಂದು ನೆಮ್ಮದಿಯ ಸ್ವರ್ಗ. ! ಆದಿಕವಿ ಪಂಪನ ಕನ್ನಡ ಹೊನ್ನುಡಿ ಅಚಲ. ಮನುಜ ಕುಲ, ತಾನೊಂದೆ ವಲ  !ಪ!    ✍️ಎನ್. ಮಿಥುನ್ ಜೈನ್

ಅಮಾಯಕ ನೈಜ ಕಥೆ ( ಸಂಚಿಕೆ-೧೦)

 ಶಾಂತಿರಾಜನನ್ನು ಕಟ್ಟಿ ಹಾಕಿದ ಗೋಣಿ ಚೀಲವನ್ನು ಬಿಡಿಸಿ ನೋಡಿದಾಗ.. ಆ ದೃಶ್ಯ ನೋಡಿದ ಮನೆ ಮಂದಿಯೆಲ್ಲ ಒಮ್ಮೆಲೆ ಗಾಬರಿಗೊಂಡರು ಕೆಲವರು ಭಯದಿಂದ ಕಿರುಚಾಡಿದರು. ಶಾಂತಿರಾಜನ ದೇಹ ಮರುಗಟ್ಟಿ ಹೋಗಿತ್ತು. ಕೈ ಕಾಲುಗಳು ಜಡ್ಡುಗಟ್ಟಿ ಹೋಗಿತ್ತು.  ನರಕವೇದನೆಯನ್ನು ತಡೆಯಲಾರದೆ  ಅಲ್ಲಿಯೇ ಮಲ ಮೂತ್ರ ವಿಸರ್ಜನೆ ಆಗಿದೆ. ಯಾವುದೇ ಮಿಸುಕಾಟ ಇಲ್ಲ,   ಅವರಲ್ಲಿ ಯಾರೋ ಒಬ್ಬರು,  ಮೂಗಿನ ಬಳಿ ಕೈ ಹಿಡಿದರು, ಉಸಿರಾಡುತ್ತಿದ್ದಾನೆ.  ಮೂರ್ಛೆ ಹೋಗಿ ತುಂಬಾ ಹೊತ್ತಾಗಿದೆ. ಆದರೆ ಪ್ರಾಣ ಹೋಗಿಲ್ಲ.  ಮುಖಕ್ಕೆ ನೀರು ಚಿಮುಕಿಸಿದರು, ಆದರೆ ಪ್ರಜ್ಞೆ ಬರುತ್ತಿಲ್ಲ. ಹೀಗೆ ಕಮಲಕ್ಕ ನಡೆದ ಘಟನೆಯನ್ನು ವಿವರಿಸುತ್ತಿದ್ದಾರೆ,  ತನ್ನ ಕರುಳ ಕುಡಿಯ ಪ್ರಾಣ ವೇದನೆಯ ಕಥೆಯನ್ನು ಕಮಲಕ್ಕನ ಬಾಯಿಯಿಂದ ಕೇಳುತ್ತಿದ್ದಾಗ ಮರುದೇವಿಯವರು ಕೋಪ ಮತ್ತು ದುಃಖ್ಖದಿಂದ ಕುದಿಯುತ್ತಿದ್ದಾರೆ. ಕಮಲಕ್ಕ ಮತ್ತೆ ಆ ದುಃಖ್ಖದ ಕಥೆ ಯನ್ನು ಮುಂದುವರೆಸಿದರು. ಪುಂಡ ಯುವಕರ ಅಹಂಕಾರವೆಲ್ಲ ಇಳಿದುಹೋಗಿದೆ,  ಸಂಪೂರ್ಣ ಬೆವತು ಹೋಗಿದ್ದಾರೆ  ತಾವು ಮಾಡಿದ ಮಹಾ ಅಪರಾಧದ ಅರಿವಾಗಿ, ಬಹಳವಾಗಿ ನೊಂದು ಕೊಂಡರು. ಕೊನೆಗೆ ಯುವಕರೆಲ್ಲ ಒಂದು ನಿರ್ಧಾರಕ್ಕೆ ಬಂದರು. ಹೇಗಾದರು ಮಾಡಿ ಶಾಂತಿರಾಜನನ್ನು ಬದುಕಿಸ ಬೇಕು. ಕೂಡಲೇ,  ಯುವಕರೆಲ್ಲ ಸೇರಿ 'ಶಾಂತಿ'ಯನ್ನು ಭಾವಿ ಕಟ್ಟೆಯ ಬಳಿ ಕುಳ್ಳಿರಿಸಿ ತಲೆಗೆ ಕೊಡಪಾನದಿಂದ ನೀರ...