ಶಾಂತಿರಾಜನನ್ನು ಕಟ್ಟಿ ಹಾಕಿದ ಗೋಣಿ ಚೀಲವನ್ನು ಬಿಡಿಸಿ ನೋಡಿದಾಗ..
ಆ ದೃಶ್ಯ ನೋಡಿದ ಮನೆ ಮಂದಿಯೆಲ್ಲ ಒಮ್ಮೆಲೆ ಗಾಬರಿಗೊಂಡರು ಕೆಲವರು ಭಯದಿಂದ ಕಿರುಚಾಡಿದರು.
ಶಾಂತಿರಾಜನ ದೇಹ ಮರುಗಟ್ಟಿ ಹೋಗಿತ್ತು. ಕೈ ಕಾಲುಗಳು ಜಡ್ಡುಗಟ್ಟಿ ಹೋಗಿತ್ತು. ನರಕವೇದನೆಯನ್ನು ತಡೆಯಲಾರದೆ ಅಲ್ಲಿಯೇ ಮಲ ಮೂತ್ರ ವಿಸರ್ಜನೆ ಆಗಿದೆ.
ಯಾವುದೇ ಮಿಸುಕಾಟ ಇಲ್ಲ,
ಅವರಲ್ಲಿ ಯಾರೋ ಒಬ್ಬರು, ಮೂಗಿನ ಬಳಿ ಕೈ ಹಿಡಿದರು, ಉಸಿರಾಡುತ್ತಿದ್ದಾನೆ. ಮೂರ್ಛೆ ಹೋಗಿ ತುಂಬಾ ಹೊತ್ತಾಗಿದೆ. ಆದರೆ ಪ್ರಾಣ ಹೋಗಿಲ್ಲ. ಮುಖಕ್ಕೆ ನೀರು ಚಿಮುಕಿಸಿದರು, ಆದರೆ ಪ್ರಜ್ಞೆ ಬರುತ್ತಿಲ್ಲ.
ಹೀಗೆ ಕಮಲಕ್ಕ ನಡೆದ ಘಟನೆಯನ್ನು ವಿವರಿಸುತ್ತಿದ್ದಾರೆ,
ತನ್ನ ಕರುಳ ಕುಡಿಯ ಪ್ರಾಣ ವೇದನೆಯ ಕಥೆಯನ್ನು ಕಮಲಕ್ಕನ ಬಾಯಿಯಿಂದ ಕೇಳುತ್ತಿದ್ದಾಗ ಮರುದೇವಿಯವರು ಕೋಪ ಮತ್ತು ದುಃಖ್ಖದಿಂದ ಕುದಿಯುತ್ತಿದ್ದಾರೆ.
ಕಮಲಕ್ಕ ಮತ್ತೆ ಆ ದುಃಖ್ಖದ ಕಥೆ ಯನ್ನು ಮುಂದುವರೆಸಿದರು.
ಪುಂಡ ಯುವಕರ ಅಹಂಕಾರವೆಲ್ಲ ಇಳಿದುಹೋಗಿದೆ, ಸಂಪೂರ್ಣ ಬೆವತು ಹೋಗಿದ್ದಾರೆ
ತಾವು ಮಾಡಿದ ಮಹಾ ಅಪರಾಧದ ಅರಿವಾಗಿ, ಬಹಳವಾಗಿ ನೊಂದು ಕೊಂಡರು.
ಕೊನೆಗೆ ಯುವಕರೆಲ್ಲ ಒಂದು ನಿರ್ಧಾರಕ್ಕೆ ಬಂದರು.
ಹೇಗಾದರು ಮಾಡಿ ಶಾಂತಿರಾಜನನ್ನು ಬದುಕಿಸ ಬೇಕು.
ಕೂಡಲೇ, ಯುವಕರೆಲ್ಲ ಸೇರಿ 'ಶಾಂತಿ'ಯನ್ನು ಭಾವಿ ಕಟ್ಟೆಯ ಬಳಿ ಕುಳ್ಳಿರಿಸಿ ತಲೆಗೆ ಕೊಡಪಾನದಿಂದ ನೀರು ಸುರಿದರು.
ಆದರೂ ಪ್ರಜ್ಞೆ ಬರಲಿಲ್ಲ.
ಕೂಡಲೇ,ಒಬ್ಬ ಯುವಕ ಓಡಿ ಹೋಗಿ ನಾಟಿ ವೈದ್ಯರನ್ನು ಕರೆದುಕೊಂಡು ಬಂದ. ನಾಟಿ ವೈದ್ಯರು ಪರೀಕ್ಷಿಸಿ ಕೆಲವು ಕಷಾಯ ಕೊಟ್ಟರು, ಆವರ ನಿರ್ದೇಶನದಂತೆ ಶಾಂತಿಯ ತಲೆಗೆ ಸೀಯಾಳಗಳನ್ನು(ಎಳೆನೀರು) ಸುರಿಯಲಾಯಿತು. ಏನು ಮಾಡಿದರು ಪ್ರಜ್ಞೆ ಬರುತ್ತಿಲ್ಲ ಶಾಂತಿ ಮಾತನಾಡುತ್ತಿಲ್ಲ.
ನಂತರ ಮನೆಯ ಚಾವಡಿಯಲ್ಲಿ ತಂದು ಮಲಗಿಸಿ ಉಪಚರಿಸಿದರು. ಆದರೆ ಯಾವುದೇ ಬದಲಾವಣೆ ಕಾಣುತ್ತಿಲ್ಲ.
ಕೆಲವೊಮ್ಮೆ ಮೂರ್ಛೆ ಬಂದಂತೆ ಆಗಿ ಮತ್ತೆ ಕೆಲವೇ ಕ್ಷಣದಲ್ಲಿ ಮೂರ್ಛೆ ಹೋಗಿ ಬಿಡುತ್ತಾನೆ. ಏನೇನೊ ಮಾತನಾಡುತ್ತ ತೊದಲುತ್ತಾ ಇರುತ್ತಾನೆ.
ಅನ್ನಹಾರ ಬಾಯಿಗೆ ಕೊಟ್ಟರು ಸರಿಯಾಗಿ ಸೇವಿಸಲು ಸಾಧ್ಯ ಆಗುತ್ತಿಲ್ಲ. ಸರಿಯಾಗಿ ಮಾತನಾಡಲು ಆಗುತ್ತಿಲ್ಲ ಸರಿಯಾಗಿ ಕಣ್ಣು ತೆರೆದು ನೋಡುವುದಿಲ್ಲ. ಅಂಗಾಂಗಗಳು ಒಂದಕ್ಕೊಂದು ಸ್ಪಂದಿಸುತ್ತಿಲ್ಲ.
ಕೆಲವು ದಿನಗಳು ಹೀಗೆ ಉರುಳಿ ಹೋದವು.
ಈಗ ಎಲ್ಲರಿಗೂ ದಿನೇ ದಿನೇ ಭಯ ಮತ್ತು ಗೊಂದಲ ಜಾಸ್ತಿ ಆಗುತ್ತಿದೆ.
ಒಂದು ವೇಳೆ ಶಾಂತಿರಾಜ ಚೇತರಿಸಿಕೊಳ್ಳದೆ ಮರಣ ಹೊಂದಿದರೆ. ಹಾಗೂ ನಡೆದ ಘಟನೆಗಳೆಲ್ಲ, 'ಶಾಂತಿ'ಯ ತಾಯಿ ಮರುದೇವಿಯಮ್ಮನಿಗಾಗಲಿ, ಶಾಂತಿಯ ಸೋದರ ಮಾವ ಪಟೇಲ ನೇಮಿರಾಜರಿಗಾಗಲಿ ತಿಳಿದಲ್ಲಿ, ನಾವುಗಳು ಎಲ್ಲರು ಜೈಲು ಸೇರಬೇಕಾಗಬಹುದು.
ಎಂಬುದನ್ನು ನೆನೆದು ಭಯಗೊಳ್ಳುತ್ತಿದ್ದರು.
ಎಲ್ಲರು ಸೇರಿ ತುಂಬಾ ಯೋಚಿಸಿದ ನಂತರ ಶಾಂತಿಯನ್ನು ಆತನ ತಾಯಿಯ ಬಳಿ ಬಿಟ್ಟು ಬರುವುದೆಂದು ನಿರ್ಧರಿಸಿದರು.
ಹಾಗೂ " ಆ ಘಟನೆ ನಡೆದ ದಿನ, ಆ ಮನೆಯಲ್ಲಿ ಇದ್ದ ಯಾರು ಕೂಡ ನಡೆದ ಯಾವುದೇ ವಿಷಯವನ್ನು ಹೊರಗಡೆ ಹೇಳಬಾರದು. ಜ್ವರ ಬಂದು ಗುಣಮುಖನಾಗಿಲ್ಲ ಎಂದೇ ಹೇಳಬೇಕು" ಎಂದು ಮನೆಯ ಹಿರಿಯರೊಬ್ಬರು ಎಲ್ಲರಿಗು ತಾಕೀತು ಮಾಡಿದರು. 'ಹೇಳಿದರೆ ಎಲ್ಲರಿಗೂ ಅಪಾಯ' ಎಂದು ಎಚ್ಚರಿಸಿದರು.
ನಂತರವೇ 'ಶಾಂತಿ'ಯನ್ನು ಆತನ ತಾಯಿಯ ಬಳಿ ಬಿಟ್ಟು ಬಂದಿದ್ದು. ಹಾಗೂ ಅತ ತಾಯಿಯ ಬಳಿಯಲ್ಲಿಯೇ ಮರಣ ಹೊಂದಿದ್ದು.
ಹೀಗೆ ನಡೆದ ಕಥೆಯನ್ನು ಎಳೆ ಎಳೆಯಾಗಿ ವಿವರಿಸಿದರು ಕಮಲಕ್ಕ.
ಇದೆಲ್ಲವನ್ನು ಕೇಳಿದ ಮೇಲೆ ಮರುದೇವಿಯವರು ಕುಸಿದು ಹೋದರು. ತನ್ನ ಕರುಳ ಕುಡಿ. ನವತಾರುಣ್ಯದ ಬಿಸಿ ರಕ್ತದ ಯುವಕ. ಯಾರದೋ ಕಪಿಚೇಷ್ಟೆಗೆ ಬಲಿಯಾಗಿ ಹೋದನಲ್ಲ ಎಂದು
ಬಹಳವಾಗಿ ದುಃಖ್ಖದಿಂದ ಕೊರಗಿದರು ಮರುದೇವಿಯಮ್ಮ.
ಕಮಲಕ್ಕನ ಮನೆಯಿಂದ ಹೊರಟು ಬಂದರು.
" ಪುತ್ರ ಶೋಕ" ಕ್ಕಿಂತ ದೊಡ್ಡ ದುಃಖ್ಖ ಈ ಜಗತ್ತಿನಲ್ಲಿ ಯಾವುದು ಇಲ್ಲವೆಂದು ಬಲ್ಲವರು ಹೇಳುತ್ತಾರೆ.
( ಮುಂದುವರಿಯುತ್ತದೆ )
ಕಾಮೆಂಟ್ಗಳು